Saturday, October 23, 2010

ಭ್ರಷ್ಟಾಚಾರದ ಸುಳಿಯಲ್ಲಿ!!

ಭ್ರಷ್ಟಾಚಾರದ ಸುಳಿಯಲ್ಲಿ!!
ಸುಮಾರು ೧೫ ವರ್ಷಗಳ ಹಿಂದೆ ನಾನು ಸರ್ಕಾರದ ಕೃಷಿಗೆ ಸಂಬಂಧಿಸಿದ ಇಲಾಖೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಯಾಗಿದ್ದಾಗ ನಡೆದ ಘಟನೆಯಿದು. ಬಡರೈತರ ಆದಾಯ ಹೆಚ್ಚಿಸಲು, ಅವರ ಹಳೆಯ ತೋಟಗಳ ಪುನಶ್ಚೇತನಕ್ಕಾಗಿ ಒಂದು ಯೋಜನೆಯನ್ನು ಆರಂಭಿಸಲಾಗಿತ್ತು. ಆರ್ಥಿಕವಾಗಿ ಹಿಂದುಳಿದ ಸಣ್ಣ-ಪುಟ್ಟ ರೈತರು ತಮ್ಮ ತೋಟಗಳಲಿದ್ದ ಹಳೆಯ, ಇಳುವರಿ ಕಡಿಮೆಯಾದ ಮರಗಳನ್ನು ತೆಗೆಸಿ ಆಧುನಿಕ ಹೊಸ ತಳಿಗಳ ಹಣ್ಣಿನ ಮರಗಳನ್ನು ಇಲಾಖೆಯಿಂದ ಉಚಿತವಾಗಿ ಪಡೆದು ನೆಡಬಹುದಾಗಿತ್ತು. ಗ್ರಾಮಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲೇ ಅವರಿಗೆ ಬೇಕಾದ ಫಲಾನುಭವಿಗಳ ಪಟ್ಟಿಯೂ ಸಿದ್ದವಾಗುತ್ತಿತ್ತು ಹಾಗು ಅವರ ಆದೇಶದ ಮೇರೆಗೆ ಎಲ್ಲವನ್ನೂ ವಿತರಿಸಲಾಗುತ್ತಿತ್ತು. ಅಂತೂ ಇಂತೂ ನಾನು ಸ್ವಲ್ಪ ಶ್ರಮವಹಿಸಿ ಆರ್ಥಿಕವಾಗಿ ಹಿಂದುಳಿದ ಕೆಲವು ರೈತರ ಹೆಸರನ್ನೂ ಆ ಪಟ್ಟಿಯಲ್ಲಿ ಸೇರಿಸುವಂತೆ ಮಾಡಿದ್ದೆ.
 
ಒಂದು ದಿನ ಒಬ್ಬ ವಯಸ್ಸಾದ ಬಡವೃದ್ದರೊಬ್ಬರು ನನ್ನ ಕಚೇರಿಗೆ ಬಂದು ತಮ್ಮ ಗುರುತಿನ ಚೀಟಿಯನ್ನು ತೋರಿಸಿ ನಾನು ಒಬ್ಬ ಫಲಾನುಭವಿ ನನಗೂ ಗಿಡ ಕೊಡಿಸಿ ಎಂದರು. ಆಗ ಸಿದ್ದಪಡಿಸಿದ್ದ ಪಟ್ಟಿಯಲ್ಲಿ ಅವರ ಹೆಸರಿರುವುದನ್ನು ಖಚಿತ ಪಡಿಸಿಕೊಂಡು ನನ್ನ ಸಹಾಯಕರ ಸಹಾಯದಿಂದ ೩೦ ಹಣ್ಣಿನ ಗಿಡಗಳನ್ನು ಅವರು ಬಾಡಿಗೆಗೆ ತಂದಿದ್ದ ಗಾಡಿಯಲ್ಲಿ ತುಂಬಿಸಿದೆವು.
ನಂತರ ಆ ವೃದ್ದರು ನನ್ನ ಕಚೇರಿಗೆ ಬಂದು ತಮ್ಮ ಹರಿದ ಅಂಗಿಯ ಕಿಸೆಯಿಂದ ಮಡಿಚಿ ಮಾಸಲಾಗಿದ್ದ ನೂರು ರೂಪಾಯಿಯ ನೋಟೋಂದನ್ನು ನನ್ನ ಕೈಗೆ ನೀಡಲು ಬಂದರು. ನನಗೆ ಆಶ್ಚರ್ಯವಾಗಿ ಏನಿದು ಎಂದು ಕೇಳಿದೆ. ಆಗ ಅವರು, ಏನಿಲ್ಲ ಸಾಹೆಬ್ರೆ, ಹಿಂದಿನ ಅಧಿಕಾರಿಗಳಿಗೆ ಈ ರೀತಿ ಗಿಡಗಳನ್ನು ತೆಗೆದುಕೊಂಡು ಹೋಗುವಾಗ ಕಡ್ಡಾಯವಾಗಿ ಅವರು ಕೇಳಿದಷ್ಟು ಹಣ ಕೊಡಬೇಕಿತ್ತು, ಈಗ ನನ್ನ ಬಳಿಯಿರುವುದು ಇಷ್ಟೇ, ನಾನು ತಂದಿರುವ ಗಾಡಿ ಬಾಡಿಗೆಗೆ ಸಹ ಈಗ ನಾನು ಯಾರಿಂದಲಾದ್ರೂ ಸಾಲ ಮಾಡಿ ಕೊಡಬೇಕು ಎಂದರು. ಒಂದು ಕಡೆ ನಮ್ಮ ವ್ಯವಸ್ಥೆಯ ಬಗ್ಗೆ ಕೋಪ, ಇನ್ನೊದೆಂಡೆ ಬಡತನದ ಬೇಗೆಯಿಂದ ಬಸವಳಿದ ಆ ವಯೋವೃದ್ದರ ಮೇಲೆ ಕನಿಕರ! ನನಗೆ ಬಹಳ ಬೇಸರವಾಗಿ ನನ್ನ ಕಿಸೆಯಿಂದ ನೂರರ ನೋಟೊಂದನ್ನು ಅವರ ಕೈಗೆ ತುರುಕಿ ಹೋಗಿ ಬನ್ನಿ ಎಂದು ಕೈಮುಗಿದು ಕಳುಹಿಸಿದೆ.
ನಾನು ನಿರ್ವಹಿಸುತ್ತಿದ್ದ ಆ ಕೆಲಸ ತಾಲ್ಲೂಕು ಮಟ್ಟದ ಗೆಜೆಟೆಡ್ ದರ್ಜೆಯದಾದರೂ ಅದರಲ್ಲಿದ್ದ, ರಾಜಕೀಯ ನೇತಾರ ಕೈವಾಡ, ಮೋಸ, ಲಂಚತನ ಎಲ್ಲ ನೋಡಿ ಬೇಸರದಿಂದ ಆ ಕೆಲಸಕ್ಕೆ ರಾಜಿನಾಮೆಯನಿತ್ತು ಬಂದಿದ್ದೆ. ನಂತರ ನನ್ನ ಮನಸ್ಸಿಗೆ ತೃಪ್ತಿತರುವ ಸಂಶೋಧನ ಕ್ಷೇತ್ರ ಸೇರಲು ಬೇಕಾದ ಪರೀಕ್ಷೆ ಕಟ್ಟಿ ಅದರಲ್ಲಿ ಪಾಸಾದೆ. ನಾನು ಆಯ್ಕೆಗೊಂಡ ಸಂಸ್ಥೆಯಿಂದ ಕೆಲಸದ ಕರೆಯೋಲೆ ಸಹ ಬಂತು. ಜೊತೆಗೆ medical ಮತ್ತು police verification report ಸಹ ಕಳುಹಿಸಿ ಎಂದು ತಿಳಿಸಿದ್ದರು.
ಬೌರಿಂಗ್ ಆಸ್ಪತ್ರೆಗೆ ಹೋಗಿ,ಅಲ್ಲಿನ ವೈದ್ಯಾಧಿಕಾರಿಗಳು ನಿಗದಿಪಡಿಸಿದ "ರಸೀತಿಯಿಲ್ಲದ ಫೀಸನ್ನು" ಕಟ್ಟಿದ ನಂತರ, ನನ್ನ ದೇಹದ ಎಲ್ಲ ಅಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಏನನ್ನೂ ಪರೀಕ್ಷಿಸದೆಯೇ ರಿಪೋರ್ಟ್ ಕೊಟ್ಟು ಕಳುಹಿಸಿದ್ದರು!!!.
ನಂತರ police verification ಗಾಗಿ ಒಬ್ಬ ಪೋಲಿಸ್ ನಮ್ಮ ಮನೆಯ ಹತ್ತಿರ ಬಂದು ಬೇಕಾದ ಪ್ರಶ್ನೆಗಳನ್ನು ಕೇಳಿ ಅಲ್ಲೂ "ರಸೀತಿ ಇಲ್ಲದೆಯೆ ಪಡೆಯುವ ಫೀಸು" ತೆಗೆದುಕೊಂಡು ಇನ್ನೊಂದು ವಾರದಲ್ಲಿ ನಿಮ್ಮ ರಿಪೋರ್ಟ್ ಕಳುಹಿಸುತ್ತೇವೆ ಎಂದು ಹೇಳಿ ಹೋದ.
ತಿಂಗಳಾಯಿತು, ೨ ತಿಂಗಳಾಯಿತು ಆ ರಿಪೋರ್ಟ್ ಪತ್ತೆಯೆ ಇಲ್ಲ!!!.
ನಾನು ಆಯ್ಕೆಗೊಂಡ ಸಂಸ್ಥೆಯಿಂದ reminder ಸಹ ಬಂತು ಬೇಗ ಅದನ್ನ ಕಳುಹಿಸಿ ಅಂತ. ಆಗ ನಾನು ನಮ್ಮ ಬಡಾವಣೆಯ ಪೋಲಿಸ್ ಠಾಣೆಗೆ ಭೇಟಿಯಿತ್ತು ಅಲ್ಲಿಂದ ಸಂಬಂಧಿಸಿದ ಫೈಲ್ ಸಂಖ್ಯೆ ಪಡೆದು ಕಮಿಷನರ್ ಕಚೇರಿಗೆ ಹೋದೆ. ಎಲ್ಲಾ ಹಂತದಲ್ಲೂ ತಾಂಡವವಾಡುತ್ತಿದ್ದ ಲಂಚತನ, ಮೋಸ, ರಾಜಕೀಯ ಎಲ್ಲ ಅನುಭವಿಸಿ ಅಂತೂ ಇಂತೂ ನನ್ನ ಕಡತ ಇರುವ ಮೇಜನ್ನು ತಲುಪಿದೆ.
ಸಂಬಂಧಪಟ್ಟ ಅಧಿಕಾರಿಗೆ ನನ್ನ ಕಡತದ ಸಂಖ್ಯೆ ನೀಡಿ ಅದರ ಬಗ್ಗೆ ವಿಚಾರಿಸಿದಾಗ ಅವನ ಮುಖದ ಮೇಲೆ ಹುಸಿನಗು!!!. ಲೀಲಾಜಾಲವಾಗಿ ತನ್ನ ಮೇಜಿನ ಡ್ರಾಯರ್ ತೆರೆದು ಅದರಲ್ಲಿದ್ದ ನನ್ನ ಕಡತ ತೋರಿಸಿ ಹೇಳಿದ, ಇದರ ರಿಪೋರ್ಟ್ ಸಿದ್ದವಾಗಿ ೨ ತಿಂಗಳಾಯಿತು, ನೀವು ಬಂದು ನನ್ನನ್ನು ವಿಚಾರಿಸಿಕೊಳ್ಳಲೇ ಇಲ್ಲ, ಅದಕ್ಕೆ ನಿಮಗೆ ಅದನ್ನು ಕಳುಹಿಸಲಿಲ್ಲ ಎಂದು ಅಣುಕು ನಗೆ ಬೀರಿದ. ನನ್ನ ಮೈ ಉರಿದು ಹೋಯಿತು. ಮೇಲಿನಧಿಕಾರಿಗಳಿಗೆ ದೂರೋಣ ಅಂದ್ರೆ, ಬೇಲಿನೇ ಎದ್ದು ಹೊಲ ಮೇಯುವ ಸ್ಥಿತಿಯನ್ನು ನಾನೇ ಕಣ್ಣಾರೆ ಕಂಡಿದ್ದೆನಲ್ಲ. ಏನು ಪ್ರಯೋಜನವಿಲ್ಲ ಎಂದು ಅವನು ಕೇಳಿದಷ್ಟು ಹಣ (ಲಂಚ!!!) ತೆತ್ತು ಆ ರಿಪೋರ್ಟ್ ತೆಗೆದುಕೊಂಡಾಗ ಅದರಲ್ಲಿ, ಹಿಂದೆ ಆ ತಾಲ್ಲೂಕು ಮಟ್ಟದ ಕಚೇರಿಗೆ ಬಂದಿದ್ದ ಆ ವಯೋವೃದ್ದ ನನ್ನ ಮುಖವನ್ನು ನೋಡಿ ಅಣಕಿಸಿ ನಕ್ಕಂತೆ ಭಾಸವಾದಾಗ ನನ್ನ ಮುಖ ಇಂಗು ತಿಂದ ಮಂಗನಂತಾಗಿತ್ತು!!
 ಸತೀ
-

3 comments:

  1. ನಿಮ್ಮ ಲೇಖನ ಮನ ಮುಟ್ಟುವಂತಿದೆ. ನನ್ನ ಫೇಸ್ ಬುಕ್ ನ "ಕನ್ನಡ ಸಂಪದ" ಪುಟದಲ್ಲಿ ಇದರ ಲಿಂಕ್ ನೀಡಿದ್ದೇನೆ.

    ReplyDelete
  2. ಧನ್ಯವಾದಗಳು ಶ್ರೀಧರ್ ಅವರೆ! ನನ್ನ ಬರವಣಿಗೆಯನ್ನು ಸುಧಾರಿಸಲು ನಿಮ್ಮ ಸಲಹೆಗಳನ್ನು ಅವಶ್ಯವಾಗಿ ತಿಳಿಸಿ.

    ReplyDelete
  3. ಬಹಳ ಸೊಗಸಾಗಿದೆ!!!
    ಆದರೆ ಈ ಕಥೆಯಲ್ಲಿ ಹಿಂದಿರುವ ಸಂಕಟ ಕಂಡಿತ ಅರಿವಗುಹುದು

    ReplyDelete