ಧರಣಿ- ವರುಣರ ಪ್ರಣಯ
ಬರಗಾಲದಿಂದ ಬರಿದಾಗಿದ್ದವು ರೈತರ ಅನ್ನದ ಬಟ್ಟಲುಗಳು,
ಕಾತರದಿ ಮುಗಿಲೆಡೆಗೆ ನೋಡುತ್ತಿದ್ದವು ಅವರ ನಯನಗಳು;
ಸುಡುವ ವಿರಹದ ಬೇಗೆಯಿಂದ ಧರಣಿಯು ಬಳಲಿರಲು,
ವರುಣನ ಸಮಾಗಮವ ಕಾಯುತ್ತಿತ್ತು ಅವಳೊಡಲು;
ಧರಣಿಯ ವಿರಹದ
ಒಡಲುರಿಯು ಮುಗಿಲು ಮುಟ್ಟಲು,
ಉನ್ಮತ್ತನಾದ ವರುಣನು ಹರಿಸಿದ ಪ್ರೀತಿಯ ಹೊನಲು;
ವರುಣನರಿಸಿದ ಆ ಪ್ರೀತಿಯ ಹೊಳೆಯಲಿ,
ಚಿಗುರೊಡೆದವು ಪೈರುಗಳು ಧರಣಿಯೊಡಲಿನಿಂದ;
ಸಾಲ ಮಾಡಿದ ರೈತನಿಂದ ತೀರಲವಳೆಲ್ಲ ಬಯಕೆಗಳು,
ದಿನದಿಂದ ದಿನಕೆ ಮೈದುಂಬಿ ಬೆಳೆದಳವಳು;
ಕಂಗೊಳಿಸುತ್ತಿದ್ದವಳ ಕಂಡು ಉನ್ಮತ್ತನಾದ ವರುಣನು,
ಮಾಡಿದನವಳ ಮೇಲೆ ಮತ್ತೆ ಮತ್ತೆ ಆಕ್ರಮಣವನು;
ತತ್ತರಿಸಿದಳಾ ಅಬಲೆ ತಾಳಲಾರದೆ ಈ ಆಘಾತ,
ಪ್ರಸವಿಸುವ ಮೊದಲೆ ಆಯಿತವಳಿಗೆ ಗರ್ಭಪಾತ;
ನೋಡಿ ವರುಣನ ಹುಚ್ಚು ಪ್ರಣಯದಾರ್ಭಟ,
ಕುಸಿದು ಬಿತ್ತು ಅನ್ನದಾತರ ಸುಂದರ ಆಶಾಕಮ್ಮಟ; ಮಾಡಿದ ಸಾಲಕೆ ಬಡ್ಡಿಯನ್ನು ತೆರಲಾರದ,
ಅನ್ನದಾತನು, ನಿರ್ಧರಿಸಿ ಸಾವಿಗೆ ಶರಣಾದ;
ವರುಣ ಧರಣಿಯರ ಈ ಪ್ರಣಯದಾಟ,
ಮಿತಿಯಾದರೆ ಅನಾವೃಷ್ಠಿ, ಅತಿಯಾದರೆ ಅತೀವೃಷ್ಠಿ!!!!
-ಸತೀ